Friday, July 17, 2009

ವೆಂಕಟಲಕ್ಷ್ಮಿಗೆ ಕಾಯ್ಕಿಣಿ ಮಾಡುವ ನಮಸ್ಕಾರಗಳು


ಮಹಿಳೆಯರ ಸ್ಥಿತಿ ಮತ್ತು ಸಾಧ್ಯತೆಗಳ ಕುರಿತು ಆಳವಾದ ಚಿಂತನೆ, ಬರವಣಿಗೆ ನಡೆಸಿದ ಗಟ್ಟಿಗಿತ್ತಿ ಬಿಎಸ್ ವೆಂಕಟಲಕ್ಷ್ಮಿ. ಇತ್ತೀಚೆಗೆ ನಿಧನರಾದ ಕನ್ನಡ ನೆಲ ಕಂಡ ಓರ್ವ ಅಪರೂಪದ ವ್ಯಕ್ತಿ ಎಂಟಿ ಬಗ್ಗೆ ಅವರನ್ನು ಹತ್ತಿರದಿಂದ ಬಲ್ಲ ಜಯಂತ್ ಬರೆಯುತ್ತಾರೆ. ಅಂದಹಾಗೆ, ಬಿಎಸ್ವಿ ಬರೆದಿರುವ ಉಯಿಲು ಅವರ ಬದುಕಿಗೆ ಅವರೇ ಬರೆದುಕೊಂಡ ಭಾಷ್ಯವಾಗಿದೆ. ಓದಿ.* ಜಯಂತ್ ಕಾಯ್ಕಿಣಿಮುಕ್ತವಾದ ಮನಸ್ಸಿನ, ಅಪರೂಪದ ನಿಲುಕುಗಳ, ಮುಲಾಜು ಗಿಲಾಜು ಇಲ್ಲದ ಸ್ಪಷ್ಟವಾದಿ ಬಿ.ಎಸ್. ವೆಂಕಟಲಕ್ಷ್ಮಿ ಜೂನ್ 26ರಂದು ಶುಕ್ರವಾರ ಹೃದಯಸ್ತಂಭನದಿಂದ ತೀರಿಕೊಂಡರು. ಅವರ ಜೀವನಸಂಗಾತಿ ಶ್ಯಾಮರಾವ್ ನನಗೆ ಫೋನ್ ಮಾಡಿದ್ದು ಮಾರನೆಯ ದಿನ ಸಂಜೆ. ಅದಾಗಲೇ ಅವರ ದನಿಯಲ್ಲಿ ಈ ಅಕಾಲಿಕ ವಿಯೋಗವನ್ನು ಭರಿಸಿಕೊಳ್ಳುತ್ತಿರುವ ಅಪಾರ ಸ್ಥೈರ್ಯವಿತ್ತು. ಜೊತೆಗೆ ಒಂದು ವಿಚಿತ್ರ ಸಂದಿಗ್ಧವಿತ್ತು. `ಎಂಟಿ’ (ವೆಂಕಟಲಕ್ಷ್ಮಿ, ಅವರ ಬಂಧು ಬಳಗಕ್ಕೆಲ್ಲಾ ‘ಎಂಟಿ) ನಮ್ಮನ್ನು ತುಂಬಾ ಫಜೀತಿಯಲ್ಲಿ ಹಾಕಿ ಹೋಗಿದ್ದಾಳಪ್ಪ – ಸಾವಿನ ಸುದ್ದಿಯನ್ನು ಯಾರಿಗೂ ತಿಳಿಸಬಾರದು, ಪತ್ರಿಕೆಗಳಿಗೆ ಹೇಳಬಾರದು, ನನ್ನ ಅಂತಿಮದರ್ಶನಕ್ಕೆ ಅಂತ ಯಾರೂ ಮನೆಗೆ ಬರಬಾರದು – ಹೀಗೆಲ್ಲಾ ನನ್ನಿಂದ ಮಾತು ತೆಗೆದುಕೊಂಡು ಹೋಗಿದ್ದಾಳೆ. ಹೀಗಾಗಿ ನಿಮಗ್ಯಾರಿಗೂ ತಕ್ಷಣ ಹೇಳಲಿಲ್ಲ. ಅವಳಿಚ್ಛೆಯಂತೆ ಅವಳ ದೇಹವನ್ನು ವೈದ್ಯಕೀಯ ಸಂಶೋಧನೆಗೆಂದು ಕೊಟ್ಟಾಯಿತು. ಆದರೆ ಈಗವಳ ಸ್ನೇಹಿತರಿಗಾದರೂ ಅವಳು ಹೋಗಿದ್ದು ತಿಳಿಯಬೇಡವೆ? ಆ ಕಾರಣಕ್ಕಾದರೂ ಪತ್ರಿಕೆಯಲ್ಲಿ ಒಂದು ಸುದ್ದಿ ಬಂದರೆ ಸರಿಯೇನೋ ಎಂದರು. ತನ್ನ ಬಾಳಿನ ಭರತ ವಾಕ್ಯವನ್ನೂ ತಾನೇ ಸ್ಪಷ್ಟವಾಗಿ, ದಿಟ್ಟವಾಗಿ ಬರೆದುಕೊಂಡು ಹೋದ ಗಟ್ಟಿಗಿತ್ತಿ ವೆಂಕಟಲಕ್ಷ್ಮಿ.ಕನ್ನಡದಲ್ಲಿ 90ರಿಂದೀಚೆ ಮಹಿಳಾವಾದ ಒಂದು ನಿರ್ದಿಷ್ಟ ಆವರಣವಾಗಿ ರೂಪುಗೊಳ್ಳುವ ಮುಂಚೆಯೇ 80ರ ದಶಕದಲ್ಲೇ ಈ ನಿಟ್ಟಿನಲ್ಲಿ ಅತ್ಯಂತ ತೀವ್ರವಾಗಿ, ಪುರೋಗಾಮಿಯಾಗಿ ಚಿಂತಿಸಿದವರು ಬಿ.ಎಸ್. ವೆಂಕಟಲಕ್ಷ್ಮಿ. ಜೀವನಾನುಭವಗಳಿಂದ ಹೊಮ್ಮಿದ ಜೀವನ್ಮುಖಿ ಸಂವೇದನೆಯ ಈಕೆಗೆ ಮನುಷ್ಯನನ್ನು ವಿಕಾಸಗೊಳಿಸಬಲ್ಲ ಎಲ್ಲ ಕ್ಷೇತ್ರಗಳಲ್ಲೂ ತೀವ್ರ ಆಸಕ್ತಿ. ಚಿತ್ರಕಲೆ, ಸಂಗೀತ, ರಂಗಭೂಮಿ ಮೂರೂ ಸಾಹಿತ್ಯದಷ್ಟೇ ಜೀವಕ್ಕೆ ಹತ್ತಿರ. ಅವರ ಮನೆಯೇ ಒಂದು ಪುಟ್ಟ ಕಲಾ ಗ್ಯಾಲರಿಯಂತಿದೆ. ಅಲ್ಲಿ ಎಂ.ಬಿ. ಪಾಟೀಲರ ತೈಲವರ್ಣ ಸಂಯೋಜನೆಗಳ ಜೊತೆ ಎಸ್.ಎಂ. ಪಂಡಿತರ ರಮ್ಯ ಚಿತ್ರಗಳೂ ಇವೆ. ಜೊತೆಗೇ ಅವರೇ ಚಿತ್ರಿಸಿದ ಕಲಾಕೃತಿಗಳೂ ಇವೆ. ಸಂಜೆ ಹೊತ್ತು ಬಾಲ್ಕನಿಯಲ್ಲಿ ಕೂತು ನಿಶ್ಯಬ್ದವಾಗಿ ಬಣ್ಣ ಬದಲಾಯಿಸುವ ಬಾನು ನೋಡುತ್ತಾ ಚಿತ್ರ ಬಿಡಿಸುವದರಲ್ಲಿ ತಲ್ಲೀನರಾಗಿರುತ್ತಿದ್ದರಂತೆ. ಕಲಾವಿದ `ಹಡಪದ’ರ ಸರ್ವಗ್ರಾಹಿ ಸಂವೇದನೆ, ಲೇಖನ ನಿರಂಜನರ ಬದುಕು-ಬರಹ ವೆಂಕಟಲಕ್ಷ್ಮಿಯವರಿಗೆ ಮಾದರಿ.ನಾನಂತೂ ಸಾಹಿತ್ಯ ಕಾರ್ಯಕ್ರಮಗಳಿಗಿಂತ ಜಾಸ್ತಿ ವೆಂಕಟಲಕ್ಷ್ಮಿ – ಶ್ಯಾಮರಾವ್ ದಂಪತಿಯನ್ನು ಭೇಟಿಯಾಗಿದ್ದು ಸಂಗೀತ ಕಾರ್ಯಕ್ರಮಗಳಲ್ಲಿ. `ಈಚೆಗೆ ಈ ಸಾಹಿತ್ಯ ಕಾರ್ಯಕ್ರಮ, ಪುಸ್ತಕ ಬಿಡುಗಡೆ ಇವೆಲ್ಲಾ ಬೋರಾಗಿಬಿಟ್ಟಿವೆ. ಎಲ್ಲೂ ಏನೂ ಹೊಸ ವಿಚಾರದ ಒಂದು ಕಿಡೀನೂ ಸಿಗೋದಿಲ್ಲ. ಬರೇ ಪರಸ್ಪರ ಹೊಗಳುವ ನಾಟಕಗಳು, ಅವೇ ಅವೇ ಅತಿಥಿಗಳು – ಹೀಗಾಗಿ ಈಗಿತ್ಲಾಗಿ ಬರೇ ಸಂಗೀತ ಕಾರ್ಯಕ್ರಮಗಳಿಗೆ ಹೋಗುತ್ತಿದ್ದೇನೆ’ಎಂದಿದ್ದರು, ಫೋನಿನಲ್ಲಿ. ಅವರು ಫೋನು ಮಾಡುವುದು ತುಂಬಾ ಅಪರೂಪ, ಆದರೆ ಅದನ್ನೂ `ನಾಳೆ ಇಷ್ಟು ಗಂಟೆಗೆ ಕಾಲ್ ಮಾಡ್ತೀನಿ – ನಿಮಗೆ ಅನುಕೂಲ ಇದ್ದರೆ’ ಎಂದು ಮುಂಚಿತವಾಗಿ ತಿಳಿಸಿ ಮಾಡುವರು.90ರ ದಶಕ ಆರಂಭಗೊಂಡಾಗ ವೆಂಕಟಲಕ್ಷ್ಮಿ ಬರೆದು ಪ್ರಕಟಿಸಿದ್ದ `ಕನ್ನಡ ಲೇಖಕಿಯರ ನೆಲೆ ಬೆಲೆ’ ಎಂಬ ಪುಸ್ತಕ ಅತ್ಯಂತ ವಿಶಿಷ್ಟವಾದದ್ದು. ಜನಪದ, ಹಳಗನ್ನಡದಿಂದಾರಂಭಿಸಿ, ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ, ಲಿಂಗಮ್ಮ, ಗೊಗ್ಗವ್ವೆ, ಮುಕ್ತಾಯಕ್ಕ, ನೀಲಮ್ಮರಂಥ ವಚನಕಾರ್ತಿಯರನ್ನು ಒಳಗೊಂಡು, ನಂತರದ ಹೊಸಗನ್ನಡದ ನಂಜನಗೂಡು ತಿರುಮಲಾಂಬ, ಆರ್. ಕಲ್ಯಾಣಮ್ಮ, ಗಿರಿಬಾಲೆ, ಶ್ಯಾಮಲಾದೇವಿ, ಸೀತಾದೇವಿ ಪಡುಕೋಣೆ, ಕೊಡಗಿನ ಗೌರಮ್ಮ, ಬೆಳಗೆರೆ ಜಾನಕಮ್ಮರಿಂದ ಹಿಡಿದು, ವಾಣಿ, ತ್ರಿವೇಣಿ, ಎಂ.ಕೆ. ಇಂದಿರಾ, ಅನುಪಮಾ ನಿರಂಜನ, ರಾಜಲಕ್ಷ್ಮಿ ಎಂ. ರಾವ್, ವೀಣಾ ಶಾಂತೇಶ್ವರರ ತನಕ ವ್ಯಾಪಿಸಿರುವ ಅವರ ಪ್ರಖರ, ನಿಖರ ಸಂವೇದನಾಶೀಲ ಅಧ್ಯಯನ ಮೌಲಿಕವಾಗಿದೆ. ನೀಳಾದೇವಿ, ಗೀತಾ ಕುಲಕರ್ಣಿ, ಎಂ.ಕೆ. ಜಯಲಕ್ಷ್ಮಿ ರೀತಿಯ ಲೇಖಕಿಯರ ಬಗೆಗಿನ ವಿಶಿಷ್ಟ ಟಿಪ್ಪಣಿಗಳು ನಮಗೆ ಇಲ್ಲಿಯೇ ಸಿಗಬೇಕು. ಹೀಗಾಗಿ 90ರ ದಶಕದ ನಂತರ ಈಚೆಗೆ ವೈವಿದ್ಯಮಯವಾಗಿ ಹುರಿಗೊಂಡಿರುವ ಮಹಿಳಾ ಅಭಿವ್ಯಕ್ತಿಯ ಆವರಣವನ್ನು ಗ್ರಹಿಸಲು ಅತ್ಯವಶ್ಯಕವಾಗಿ ಬೇಕಾದ ಸಾಹಿತ್ಯಿಕ, ಚಾರಿತ್ರಿಕ ಪ್ರಬಲ ಪೂರ್ವಪಕ್ಷ ಈ ಪುಸ್ತಕದಲ್ಲಿದೆ. ಇದೇ ಸುಮಾರಿಗೆ ಅವರು ಬರೆದು 1994ರಲ್ಲಿ ಪ್ರಕಟಿಸಿದ ಬದುಕು, ಬವಣೆ, ಭರವಸೆ- ಮಹಿಳಾ ಲೋಕದ ಕುರಿತ ಅತ್ಯಂತ ತೀಕ್ಷ್ಣವಾದ ಮತ್ತು ವ್ಯಾಪಕವಾದ ಬರವಣಿಗೆಯಾಗಿದೆ. ಪುರುಷಪೀಡಿತಳಾಗಿ, ಪುರುಷ ರೂಪಿತಳಾಗಿ ಹೇಳ ಹೆಸರಿಲ್ಲದೆ ನವೆಯುವ, ಸವೆಯುವ ಅಗಣಿತ ಹೆಂಗಳೆಯರ ಪಾಡನ್ನು ಚೂರೂ ಭಾವವೇಶವಿಲ್ಲದೆ, ಅತ್ಯಂತ ಎಚ್ಚರಿಕೆಯಿಂದ, ಬಹುಮುಖಿ ಕಾಳಜಿಯಿಂದ ಅರಿಯುವ ಕನ್ನಡದ ತುಂಬ ಅಪರೂಪದ ಪುಸ್ತಕವಿದು. ಸೀಮೋ ದ ಬುವಾ ಅವರ `ದಿ ಸೆಕೆಂಡ್ ಸೆಕ್ಸ್’ ಕೃತಿಯಿಂದ ಪ್ರೇರಿತರಾದ ವೆಂಕಟಲಕ್ಷ್ಮಿ, ಈ ಪುಸ್ತಕದ ಪ್ರಸ್ತಾವನೆಯಲ್ಲಿ ಹೀಗೆ ಹೇಳುತ್ತಾರೆ. `ದಿ ಸೆಕೆಂಡ್ ಸೆಕ್ಸ್ ನಲ್ಲಿ ಅಡಕವಾಗಿರುವ ವಿಚಾರಗಳನ್ನು ನನ್ನದೇ ಆದ ಬಂಧ, ಭಾಷೆ, ಶೈಲಿಯಲ್ಲಿ ಒಟ್ಟುಗೂಡಿಸಿದ ನಂತರ ಮಹಿಳೆಯರ ಜೀವನದ ಬಗ್ಗೆ ಒಂದು ಗಾಢ ಚೌಕಟ್ಟು ನಿರ್ಮಾಣವಾಯಿತು ಎನ್ನಿಸಿದರೂ, ಭಾರತೀಯ ಮಹಿಳೆಯರಿಗೆ ಒದಗಿರುವ ಸಂದರ್ಭಗಳು ಸೀಮೋ ದ ಬುವಾರಂತಹ ಅತ್ಯದ್ಭುತ ಲೇಖಕಿಯ ತಿಳುವಳಿಕೆಗೂ ಮೀರಿದ್ದು ಅನ್ನಿಸುತ್ತದೆ. ಭಾರತೀಯ ಮಹಿಳೆಯರು ಎಂಥ ವಿಚಿತ್ರ ಸನ್ನಿವೇಶಗಳನ್ನು ಎದುರಿಸಬೇಕಾಗಿದೆ ಎಂಬುದನ್ನು ಶೋಧಿಸುತ್ತಾ ಹೊರಟಾಗ ನನ್ನಲ್ಲಿ ಮೂಡಿದ್ದು ಹಲವಾರು ವಿಚಾರಗಳು. ಸ್ತ್ರೀಯರಿಗೆ ಎದುರಾಗುವ ಅಡೆತಡೆಗಳು ಹಾಗೂ ಅವಕಾಶಗಳನ್ನು ವಿಪುಲವಾಗಿ ಚರ್ಚಿಸುತ್ತಿರುವಾಗ, ಭಾರತೀಯ ಮಹಿಳೆಯರಿಗೆ ಒದಗಿರುವ ವಾತಾವರಣವನ್ನು ಪ್ರತ್ಯೇಕವಾಗಿ ದಾಖಲೆಗೊಳಿಸುವುದು ಸೂಕ್ತವೆನಿಸಿತು. ಇವೆಲ್ಲಾ ಹಂಬಲಗಳ ಪರಿಣಾಮವೇ ಈ ಪುಸ್ತಕ.’ವೆಂಕಟಲಕ್ಷ್ಮಿ ಅವರದು ವಿರಳ ವಿಶೇಷ ಕಥನೇತರ ದನಿ. ಇವರ ದನಿ ಆಲಿಸದೆ ಕನ್ನಡದ ಓದು ಅಪೂರ್ಣ. ಮನಸ್ಸು ಮಾಡಿದ್ದರೆ ಕಥೆ ಬರೆಯಬಹುದಾಗಿತ್ತು. ಬರೆದಿದ್ದರು ಕೂಡ. ಆದರೆ `ಸತ್ಯಕ್ಕೆ ಮಸಾಲೆ ಬೆರೆಸೋದು, ಒಗ್ಗರಣೆ ಹಾಕೋದು ಯಾಕೋ ನನ್ನ ಪ್ರಕೃತಿಗೆ ಒಗ್ಗುವದಿಲ್ಲ’ಎಂದಿದ್ದರಂತೆ. ಮಲ್ಲಿಕಾರ್ಜುನ ಮನ್ಸೂರ್ ಬಗ್ಗೆ ಅವರು ಬರೆದ ಪುಸ್ತಕ ಮತ್ತು ಚಿತ್ರಕಲೆಗಾರ ಎಂ.ಬಿ. ಪಾಟೀಲರ ಬಗ್ಗೆ ಬರೆದ ಪುಸ್ತಕ ಅವರ ಸಂವೇದನೆ ಮತ್ತು ಅಭಿರುಚಿಯ ವಿಸ್ತಾರವನ್ನು ಮನಗಾಣಿಸುವಂತಿವೆ. ಬರೆದಿದ್ದು ನಾಲ್ಕೇ ಪುಸ್ತಕ, ಆದರೆ ಎಂಥ ಗಟ್ಟಿಯಾದ, ವರ್ಚಸ್ವಿಯಾದ, ಅನುರಣಿಸುವ ಧ್ವನಿ!ಲಂಕೇಶ್ ಪತ್ರಿಕೆಯಲ್ಲಿ ನಿಯಮಿತವಾಗಿ ಬರೆಯುತ್ತಿದ್ದರು. ಲಂಕೇಶರಿಗೆ ಕಪಟ, ಅಲ್ಪತನ, ಆತ್ಮವಂಚನೆ ಕಂಡರಾಗುತ್ತಿರಲಿಲ್ಲ. ವೆಂಕಟಲಕ್ಷ್ಮಿಯವರಿಗೂ ಹಾಗೇ. ಹೀಗಾಗಿ ಇಬ್ಬರ ಮನೋಧರ್ಮಗಳು ಹೊಂದಿಕೆಯಾಗಿದ್ದವು. ಆದರೆ ಒಂದು ದಿನ ಹಠಾತ್ತನೆ ಲಂಕೇಶ ಬಳಗದಿಂದ ವೆಂಕಟಲಕ್ಷ್ಮಿ ಸದ್ದಿಲ್ಲದೆ ದೂರವಾಗಿದ್ದು ಓದುಗರ ತಾತ್ಕಾಲಿಕ ಕುತೂಹಲಕ್ಕೆ ಕಾರಣವಾಯಿತು. ಆದದ್ದಿಷ್ಟೇ: ಲಂಕೇಶರ ಆತ್ಮಕತೆ ಪ್ರಕಟವಾಗಿತ್ತು. ಆಗ ವೆಂಕಟಲಕ್ಷ್ಮಿ ಬಾಗಲಕೋಟೆ ಮುಳುಗಡೆ ಪ್ರದೇಶದ ಜನರ ಬವಣೆಯ ಕುರಿತು ಆಮೂಲಾಗ್ರ ಬರವಣಿಗೆ ಮಾಡಲು ಅಲ್ಲಿಗೆ ಹೋಗಿ ಕೆಲವು ವಾರ ಅಲೆದಾಡಿಕೊಂಡಿದ್ದರು. ಪ್ರಜಾವಾಣಿಯ ಜಿ.ಎನ್. ರಂಗನಾಥ್ ರಾವ್ ಅವರು ಕೊಟ್ಟಿದ್ದ ಬರವಣಿಗೆಯ ಕೆಲಸ ಅದು. ವೆಂಕಟಲಕ್ಷ್ಮಿ ತಮ್ಮ ಪ್ರವಾಸದ ನಡುವೆಯೇ ಲಂಕೇಶರ ಆತ್ಮಕತೆಯನ್ನು ಅಲ್ಲೇ ತರಿಸಿಕೊಂಡು, ಎಂದಿನ ಉತ್ಸಾಹ, ಆರಾಧನೆ ಮತ್ತು ತಾಟಸ್ಥ್ಯದಿಂದಲೇ ಓದಿದರು. ಅವರಿಗೆ ಏನೋ ಕಸಿವಿಸಿ ಆಗಿಹೋಯಿತು. ಆತ್ಮಕತೆಯಲ್ಲಿ ಸತ್ಯವನ್ನು ಮರೆಮಾಚುವ ಅಂಶ ಇದ್ದಂತೆ ಅನಿಸಿತು. ನೇರವಾಗಿ ಫೋನ್ ಮಾಡಿ ಹೇಳಿಬಿಟ್ಟರು. `ಬೇರೆಯವರ ಆತ್ಮವಂಚನೆ ಸಹಿಸದವರು ನೀವು. ಅದಕ್ಕೇ ನೀವು ನನಗೆ, ನನ್ನಂಥವರಿಗೆ ಇಷ್ಟ. ನೀವೇ ಹೀಗೆ ಆತ್ಮವೈಭವ ಮಾಡಿದರೆ ಹೇಗೆ?’ ಎಂದು ಕೇಳಿದರು. ಲಂಕೇಶರಿಗೆ ಅದು ಇಷ್ಟವಾಗಲಿಲ್ಲ. ಮತ್ತೆ ಲಂಕೇಶ್ ಪತ್ರಿಕೆ ಆಫೀಸಿನ ಕಡೆ ಇವರು ಹೋಗಲಿಲ್ಲ. ಲಂಕೇಶ್ ತೀರಿಕೊಂಡಾಗ ಕೊನೆಯ ದರ್ಶನಕ್ಕೆಂದು ಹೋದರೂ ಲಂಕೇಶರ ಬಳಗಕ್ಕೆ ಸಾಂತ್ವನ ನೀಡಿ ಬಂದರು – ಹೊರತು `ಅವರಿಗೆ ಅದು ಇಷ್ಟವಾಗಲಿಕ್ಕಿಲ್ಲ’ಎಂದು ಮೃತಶರೀರವನ್ನು ನೋಡಲಿಲ್ಲ.`ಕೃತಿ ವಿಮರ್ಶೆಯನ್ನು `ವ್ಯಕ್ತಿ ವಿಮರ್ಶೆ’ ಎಂದು ತಿಳಿದುಕೊಳ್ಳುವ ಕೆಲ ಪ್ರತಿಷ್ಠಿತರ ಬಗ್ಗೂ ಅವರು ನೊಂದುಕೊಂಡಿದ್ದರು. ಖ್ಯಾತ ಟಿ.ವಿ. ನಿರ್ದೇಶಕರೊಬ್ಬರ ಧಾರಾವಾಹಿಯ ಕುರಿತು ವೆಂಕಟಲಕ್ಷ್ಮಿ ತಮ್ಮ ನಿರ್ಭಿಡೆಯ ಅಭಿಪ್ರಾಯ ಹೇಳಿದ್ದರು. ನಂತರ ಸ್ನೇಹಿತರೊಬ್ಬರ ಮದುವೆಗೆ ಹೋದಾಗ ಬಾಗಿಲಲ್ಲಿ `ಸ್ವಾಗತೋಪಚಾರ’ಕ್ಕೆ ನಿಂತಿದ್ದ ಆ ಖ್ಯಾತರು, ಇವರನ್ನು ನೋಡಿದ್ದೇ ಮುಖ ಸಿಂಡರಿಸಿ ಪಕ್ಕಕ್ಕೆ ನೋಡಿದರಂತೆ. ಅದನ್ನು ಹೇಳುವಾಗ ವೆಂಕಟಲಕ್ಷ್ಮಿ ನಿಜಕ್ಕೂ ನೊಂದಿದ್ದರು. `ಅಲ್ಲಾ, ಅವರ ಸಾಕಷ್ಟು ಜನಪ್ರಿಯ ಕೃತಿಯ ಕುರಿತು ನಾನು ಮಾಡಿದ ಕೃತಿನಿಷ್ಠ ವಿಮರ್ಶೆಯನ್ನು ಅವರ ವ್ಯಕ್ತಿತ್ವಕ್ಕೆ ಹಚ್ಚಿಕೊಳ್ಳುತ್ತಾರಲ್ಲಾ – ಇವರು ಎಷ್ಟು ಆತ್ಮಮೋಹಿತರು? ಅವರ ಕಲೆಯ ನೈತಿಕತೆ ಎಲ್ಲಿದೆ?’ ಎಂದು ನನ್ನೊಂದಿಗೆ ಫೋನಿನಲ್ಲಿ ಆಘಾತ ಹಂಚಿಕೊಂಡಿದ್ದರು. ಪ್ರಾಮಾಣಿಕ ಸತ್ಯಾನ್ವೇಷಣೆಯಿಂದಲೇ ಬರುವ ನಿರ್ಭಯ ಅವರದು.ನನ್ನ ಮತ್ತು ವೆಂಕಟಲಕ್ಷ್ಮಿಯವರ ಮಮತೆಯ ನಂಟಿನಲ್ಲಿ `ಹಾಯ್! ಬೆಂಗಳೂರ್’ನ ಪಾತ್ರವೂ ಇದೆ. ಏಕೆಂದರೆ ಅವರು ತಮ್ಮ ಆತ್ಮಕಥನದ ಅಂಕಣವನ್ನು ಮತ್ತು ನಾನು ನನ್ನ `ಬೊಗಸೆಯಲ್ಲಿ ಮಳೆ’ ಅಂಕಣವನ್ನು ಅದರಲ್ಲಿ ಒಂದೇ ಕಾಲಕ್ಕೆ ಬರೆಯುತ್ತಿದ್ದೆವು. ಅಕ್ಕಪಕ್ಕದ ಪುಟಗಳಲ್ಲೇ ಅವು ಅಚ್ಚಾಗುತ್ತಿದ್ದವು. ಒಂದೇ ಕಟ್ಟಡದಲ್ಲಿ ಅಕ್ಕಪಕ್ಕದ ಮನೆಯಲ್ಲಿ ಬಾಡಿಗೆಗಿದ್ದ ನೆರೆಯ ನಂಟು ಅದು! ನಾನು ಮುಂಬಯಿಯಿಂದ ಬೆಂಗಳೂರಿಗೆ ವಲಸೆ ಬಂದಾಗ ಅವರು ಬಾಯಿಬಿಟ್ಟು ಹೇಳದಿದ್ದರೂ ನನಗೆ ಆಗ ಅಗತ್ಯವಾಗಿ ಕಿಲೋಗಟ್ಟಲೆ ಬೇಕಿದ್ದ ಧೈರ್ಯ ಮತ್ತು ಅಭಯಗಳು ಅವರ ನಿಲುವಿನಲ್ಲಿ, ದನಿಯಲ್ಲಿ, ಸಂಕ್ಷಿಪ್ತ ಭೇಟಿಯಲ್ಲಿ ನನಗೆ ಸಿಗುತ್ತಿದ್ದವು. ಆಗಲೇ ಅವರು ಸರಕಾರಿ ಕೆಲಸದಿಂದ ಸ್ವಯಂ ನಿವೃತ್ತಿ ತೆಗೆದುಕೊಂಡು `ಚಾವಡಿ’ಯನ್ನು ಶುರುಮಾಡಿದ್ದು.ಸರ್ಕಾರಿ ಕೆಲಸದಲ್ಲಿದ್ದರೂ ಪ್ರಶಸ್ತಿ ಗಿಶಸ್ತಿ ಅವರನ್ನು ಅರಸಿಕೊಂಡು ಬಂದಿದ್ದರೂ, ಸೈಟು ಗಿಯ್ಟು ಅಂತ ತುಸುವೂ ಪ್ರಯತ್ನಶೀಲರಾಗದೆ, ಗಂಡ-ಹೆಂಡತಿ ತೆಪ್ಪಗೆ ಆಗಷ್ಟೇ ತಲೆ ಎತ್ತಿ ನಿಂತಿದ್ದ ಮುನ್ನೂರು ಮನೆಗಳ ಅಪಾರ್ಟಮೆಂಟಿನಲ್ಲಿ ಮೊದಲ `ವಾಸಿ’ಗಳಾಗಿ ಮನೆ ಹೂಡಿದರು. ಕತ್ತಲಲ್ಲಿ ಬಿಕೋ ಎನ್ನುತ್ತಿದ್ದ ಆ ಅಪಾರ್ಟ್ಮೆಂಟ್ ನಲ್ಲಿ ಮೊದಲು ಬೆಳಕು ಹತ್ತಿಕೊಂಡಿದ್ದು ಇವರ ಫ್ಲಾಟಿನಲ್ಲಿ.ಮುನ್ನುಡಿ ಗಿನ್ನುಡಿಗಳ ಹಂಗಿಲ್ಲದೆ ತನ್ನ ಪುಸ್ತಕಗಳನ್ನು ಪ್ರಕಟಿಸಿಕೊಂಡಿದ್ದ ವೆಂಕಟಲಕ್ಷ್ಮಿ, ಆಗಾಗ ಶ್ಯಾಮರಾವ್ ಗೆ ಹೇಳುತ್ತಿದ್ದ ಮಾತು `ಹುಲಿ ಉಪವಾಸ ಬೀಳಬಹುದು, ಆದರೆ ಖಂಡಿತಾ ಹುಲ್ಲು ತಿನ್ನಲ್ಲ’. ಅವರದು ನಿರಂತರ ವಿಕಾಸಮುಖಿ ಮನಸ್ಸು. ಹೀಗಾಗಿ ಯಾವುದೇ ಎರಕ, ಖಾನೆಗಳಲ್ಲಿ ಬೀಳದೆ ಅದು ಅಲೆಅಲೆಯಾಗಿ ಮುಂದುವರೆಯುತ್ತಿತ್ತು. ನಾನೊಮ್ಮೆ `ನನಗೆ ಯಾಕೋ ಲೆಟರ್ ಹೆಡ್, ವಿಸಿಟಿಂಗ್ ಕಾರ್ಡ್ ಎಂದರೆ ಅಲರ್ಜಿ. ಯಾರಾದರೂ ನಿಮ್ಮ ಕಾರ್ಡ್ ಇದ್ದರೆ ಕೊಡಿ ಸಾರ್ ಎಂದರೆ ತುಂಬಾ ಅವಮಾನ ಆದಂತೆ ಆಗ್ತದೆ. ಜನ ತಪ್ಪು ತಿಳಕೊಳ್ತಾರೆ’ಎಂದಾಗ, ಹೆಗಲು ತಟ್ಟಿ `ಏನೂ ಚಿಂತೆ ಮಾಡಬೇಡಿ. ನನಗೂ ಅವೆಲ್ಲಾ ಆಗಲ್ಲ. ಹೆಚ್ಚು ಒತ್ತಾಯ ಮಾಡಿದರೆ ರೇಶನ್ ಕಾರ್ಡ್ ತೋರಿಸೋಣ’ ಎಂದು ನಕ್ಕಿದ್ದರು.ಅವರಿಗೆ ಮಹಿಳಾಪುಟ, ಮಹಿಳಾ ವಿಭಾಗ ಅಂತ ಪತ್ರಿಕೆಗಳು ನಿಗದಿ ಪುಟ ಮಾಡುವುದು ಬಿಲ್ಕುಲ್ ಆಗುತ್ತಿರಲಿಲಲ್ಲ. `ಇದಿಷ್ಟೇ ಜಾಗದಲ್ಲಿ ನೀವು ಆಟ ಆಡಿ ಎಂದಂತೆ ಇದೆ ಅದು. ಅದರ ಹಿಂದೆ ಗ್ರೇಸ್ ಮಾರ್ಕ್ ಕೊಡುವಂತಹ ಪುರುಷ ಹಸ್ತವೂ ಅಸ್ಪಷ್ಟವಾಗಿ ಇದೆ. `ಕಡಿಮೆ ಗುಣಮಟ್ಟ ಇದ್ದರೆ ಮಹಿಳಾಪುಟಕ್ಕೆ’ ಅನ್ನುವಂತಹ ವಿಚಿತ್ರ ಧೋರಣೆ ಮೂಡುವಂತಾಗಿ ಹೋಗಿದೆ. ಮುಖ್ಯಧಾರೆಯಲ್ಲಿ ಅಭಿನ್ನವಾಗಿ ಬೆರೆತು ಹೋಗಿರುವ ಮಹಿಳೆಗೆ ಇದು ಅವಮಾನ’ ಎನ್ನುತ್ತಿದ್ದರು. ಮಹಿಳೆಯರು ಆ ಪುಟಗಳನ್ನು ಮಾತ್ರ ಓದುವುದು, ಪುರುಷರು ಅದನ್ನು ಓದದಿರುವುದು ಇಂಥಾ ಅವಲಕ್ಷಣಗಳು ಹುಟ್ಟುವುದೇ ಇದರಿಂದ ಎಂದು ಅವರಿಗೆ ಸಿಟ್ಟು. ಅದಕ್ಕೇ ಇರಬೇಕು, ಲೇಖಕಿಯರ ಸಂಘ, ಮಹಿಳಾ ವೇದಿಕೆ ಇಂಥಾ ಸಂಘಟನೆಗಳ ಜೊತೆ ಅವರನ್ನು ಊಹಿಸಲೂ ಆಗದಂತೆ ಅವರು ತಮ್ಮ ಪಾಡಿಗಿದ್ದರು. ಮಹಿಳಾಪರ ಸಂಕಿರಣಗಳಲ್ಲೂ, ಚರ್ಚೆಗಳಲ್ಲೂ ಇವರನ್ನು ಯಾವ ಸಾಂಸ್ಕೃತಿಕ ಪಟುಗಳೂ ಕರೆದಿದ್ದನ್ನು ನಾನು ಕಂಡಿಲ್ಲ. ಇದು ಅವರ ವ್ಯಕ್ತಿ ವಿಶಿಷ್ಟ ಹೆಗ್ಗಳಿಕೆಯಾಗಿಯೇ ನನಗೆ ತೋರುತ್ತಿದೆ.ನನಗೆ ನಿಜಕ್ಕೂ ಕೌತುಕ ಎನಿಸಿದ ಒಂದು ಅಂಶವೆಂದರೆ 80ರ-90ರ ಸಂಕ್ರಮಣ ಕಾಲದಲ್ಲಿ ತನ್ನ ಸಮಯಕ್ಕಿಂತ ಮುಂದೆ ನೋಡಬಲ್ಲವರಾಗಿ ಮಹಿಳೆಯರ ಸ್ಥಿತಿ ಮತ್ತು ಸಾಧ್ಯತೆಗಳ ಕುರಿತು ಆಳವಾದ ಚಿಂತನೆ, ಬರವಣಿಗೆ ನಡೆಸಿದ ಈಕೆ 2000ದ ಶಕೆ ಆರಂಭವಾದಾಗ ಒಂದು ಬಗೆಯ ಹಿನ್ನೋಟದ ಬೆಳಕಿಂಡಿಯಂತೆ `ಚರ್ಚೆಗೊಂದು ಚಾವಡಿ’ತೆರೆದದ್ದು! ಕೇವಲ `ಸಾಹಿತ್ಯಿಕ’ಗೊಂಡು ಜಡಗೊಳ್ಳುವ ಅಪಾಯಕ್ಕೆ ಭಯ ಪಟ್ಟ ಅವರ ಜೀವನ್ಮುಖಿ ಮನಸ್ಸು ತಾನು ಈತನಕದ ದಾರಿಯಲ್ಲಿ ಕಳೆದುಕೊಂಡಿರಬಹುದಾದ, ಅಥವಾ ಮರೆತಿರಬಹುದಾದ, ತನ್ನನ್ನು ಬೆಳೆಸಿದ ಸಂಗತಿಗಳನ್ನು ಮತ್ತೆ ಹೆಕ್ಕಿ ಹಂಚಿಕೊಳ್ಳುವ ಯತ್ನದಲ್ಲಿ ತೊಡಗಿತು. ಸಂಗೀತ, ವಿಜ್ಞಾನ, ಪರಿಸರ, ತಿಂಡಿ, ಉಡುಪು, ಭಕ್ತಿ, ಹರಿಕಥೆ, ಕಾಯಕತತ್ವ ಒಂದೇ ಎರಡೇ. ಬದುಕಿನ ವಿವಿಧ ಹೆಣಿಗೆಗಳನ್ನು ಹೆಣಿಗೆ ಬಿಚ್ಚದೆ ಅದರ ಒಟ್ಟಂದದಲ್ಲಿ ಗ್ರಹಿಸುವ ಕೆಲಸವನ್ನು ಸದ್ದಿಲ್ಲದೆ ಒಂಬತ್ತು ವರುಷ ಪ್ರತಿ ತಿಂಗಳೂ ಒಂದು ಭಕ್ತಿಯ ವ್ರತದಂತೆ ಮಾಡಿಕೊಂಡು ಬಂದರು. ತಾವೇ ಟೈಪ್ ಮಾಡಿ, ಪುಟ ಸಂಯೋಜನೆ ಮಾಡಿ, ಪ್ರೆಸ್ಸಿಗೆ ಹೋಗಿ ಮುದ್ರಿಸಿ ತಂದು ಇಷ್ಟ ಮಿತ್ರರಿಗೆ, ಬಳಗಕ್ಕೆ ಕೈಯಿಂದ ಸ್ಟಾಂಪ್ ಹಚ್ಚಿ, ವಿಳಾಸ ಬರೆದು ಅಂಚೆಗೆ ಹಾಕುವ ಸರಳ ಅಧ್ಯಾತ್ಮ ಅವರದಾಯ್ತು. ತಮ್ಮ ಪೆನ್ಶನ್ ಹಣದಲ್ಲಿ ಮುಖ್ಯ ಪಾಲನ್ನು ಅವರು ಇದಕ್ಕೆ ಮತ್ತು ಪುಸ್ತಕ ಖರೀದಿಗೆ ಮೀಸಲಿಟ್ಟಿದ್ದರು. ಅವೆನ್ಯೂ ರೋಡಿನ ಹಳೆಪುಸ್ತಕದ ಅಂಗಡಿಗಳಲ್ಲಿ ನಿಧಿ ಹುಡುಕುವವರಂತೆ ಪುಸ್ತಕ ಅರಸಿ ಕೊಳ್ಳುತ್ತಿದ್ದರು.ಅಸು ನೀಗುವ ಮುನ್ನಾ ದಿನವೇ ಈ ತಿಂಗಳ `ಚಾವಡಿ’ಯನ್ನು ಅಂಚೆಗೆ ಹಾಕಲು ಅಣಿ ಮಾಡಿ ನೀಟಾಗಿ ಚೀಲದಲ್ಲಿ ಇಟ್ಟಿದ್ದರು. ಅಂಚೆ ಕಛೇರಿಗೆ ಗಂಡಹೆಂಡತಿ ಹೋಗುವಾಗ `ಚಾವಡಿ’ಯ ಪ್ರತಿಗಳಿರುವ ಚೀಲವನ್ನು ಹಠ ಮಾಡಿ ತಾವೇ ಹಿಡಿದುಕೊಂಡಿರುತ್ತಿದ್ದರಂತೆ. `ಕೊಡು”ಎಂದರೆ, `ನನ್ನ ಶಿಲುಬೆಯ ಭಾರ ನಾನೇ ಹೊರಬೇಕು’ ಎನ್ನುತ್ತಿದ್ದರಂತೆ. ಮನಸ್ಸಿನಲ್ಲಿ ಅಪಾರವಾದ ಧೈವಭಕ್ತಿ ಇದ್ದರೂ `ಪ್ರವಚನಗಳಿಗೆಲ್ಲಾ ಬರೋದಿಲ್ಲ, ಬೇಂದ್ರೆ, ಡಿವಿಜಿ, ಕುವೆಂಪು, ಶಿವರಾಮ ಕಾರಂತರಲ್ಲಿ ಸಿಗುವಂಥದ್ದು ಅಲ್ಲೆಲ್ಲಿ ಸಿಗುತ್ತೆ?’ಎನ್ನುತ್ತಿದ್ದರಂತೆ. ಅಡಿಗೆ ಕೋಣೆಯಲ್ಲಿ ಅತ್ಯಂತ ಕಡಿಮೆ ಸಮಯ ಕಳೆಯುವಂತೆ ತಮ್ಮ ದಿನಚರಿಯನ್ನು ರೂಪಿಸಿಕೊಂಡಿದ್ದರು. ಮುಂಜಾನೆ ಒಂದು ಗಂಟೆ, ಸಂಜೆ ಅರ್ಧ ಗಂಟೆ ಅಷ್ಟರಲ್ಲೇ `ಮನೆವಾರ್ತೆ’ಯನ್ನು ನಿಖರವಾಗಿ ಪೂರೈಸಿ, ಉಳಿದ ಸಮಯ ಓದು ಬರಹ ಚಿತ್ರಕಲೆಯಲ್ಲಿ ಕಳೆಯುತ್ತಿದ್ದರಂತೆ. ವೀಣಾ ಸಹಸ್ರಬುದ್ಧೆ, ಬಾಂಬೆ ಜಯಶ್ರೀ ಈಚೆಗೆ ಅವರು ತುಂಬಾ ಆಲಿಸುತ್ತಿದ್ದ ಸಂಗೀತ. ಬೆಂಗಳೂರಿನಲ್ಲಿ ಸರ್ಕಾರಿ ಕೆಲಸದಲ್ಲಿದ್ದ ಆಕೆಗೆ ತೊಂದರೆ ಆಗಕೂಡದೆಂದು ಹೊರ ಊರಿನ ತಮ್ಮ ಒಳ್ಳೆ ಉದ್ಯೋಗ ತೊರೆದು ಬೆಂಗಳೂರಿಗೇ ಬಂದ ಪತಿ ಶ್ಯಾಮರಾವ್ ಗೆ ಆಕೆ ಸ್ನೇಹಿತೆ, ತತ್ವಜ್ಞಾನಿ, ಮಾರ್ಗದರ್ಶಿ ಎಲ್ಲ.ಅವರು ದೇಹಾಂತದ ಎರಡು ತಿಂಗಳ ಮುನ್ನವೇ ಬರೆದಿಟ್ಟ ಮರಣಪತ್ರ, ಅವರ ಅಚಲ, ತಾತ್ವಿಕ, ಸಾತ್ವಿಕ, ಪುರೋಗಾಮಿ ನಿಲುವನ್ನು ಬಿಂಬಿಸುವಂತಿದೆ. ಅದರ ಕೆಲ ಅಂಶಗಳು ಹೀಗಿವೆ. ಇದನ್ನು ಶ್ಯಾಮರಾವ್ ಅತ್ಯಂತ ಘನತೆಯಿಂದ, ಸಾಮಾಜಿಕ ಅಭಿಮಾನದಿಂದ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.`ನನ್ನ ದೇಹದ ಅಂತಿಮ ವಿಲೇವಾರಿಗೆ ಯಾವ ಪುರೋಹಿತರೂ ಬರಬಾರದು. ನನಗೆ ಅರಿಷಿಣ ಕುಂಕುಮ ಹಚ್ಚಬಾರದು. ನನ್ನ ಮೃತ ದೇಹದ ದರ್ಶನಕ್ಕೆ ಯಾರೂ ಬರಬಾರದು. ನನ್ನ ದೇಹವನ್ನು ಮೆಡಿಕಲ್ ಕಾಲೇಜಿನ ಸಂಶೋಧನಾ ವಿಭಾಗಕ್ಕೆ, ಕಣ್ಣುಗಳನ್ನು ಕಣ್ಣಿನ ಬ್ಯಾಂಕಿಗೆ ಕೊಡಬೇಕು. ನನ್ನ ನಿಧನದ ಸುದ್ದಿಯನ್ನು ಪತ್ರಿಕೆಗೆಲ್ಲಾ ಕೊಡಬಾರದು. ನಾನು ಜೀವಿತಾವಧಿಯಲ್ಲೇ ಸಾಕಷ್ಟು ಅನ್ನವನ್ನು ತಿಂದಿರುವೆನಾದ್ದರಿಂದ ನನ್ನ ಬಾಯಲ್ಲಿ ದಯವಿಟ್ಟು ಅಕ್ಕಿಕಾಳು ಹಾಕಬಾರದು. ನಾನು ಬದುಕಿದ್ದಾಗಲೇ ಅನಾಥಾಶ್ರಮದ ಮಕ್ಕಳಿಗೆ ನಿಯಮಿತವಾಗಿ ಊಟ ಹಾಕಿರುವೆನಾದ್ದರಿಂದ ನನ್ನ ನಿಧನಾನಂತರ ನನ್ನನ್ನು ವೈಕುಂಠಕ್ಕೆ ಕಳುಹಿಸುವ ನೆಪದಲ್ಲಿ ಇನ್ಯಾರೂ ಭೂರಿಭೋಜನ ಮಾಡುವ ಅಗತ್ಯವಿಲ್ಲ. ಯಾರೋ ಸಂಬಂಧಿಕರು ಹಟ ಮಾಡಿದರು ಅಂತ, ಅಥವಾ ಯಾರಿಗಾದರೂ ಬೇಜಾರಾಗುತ್ತದೆ ಅಂತ ಪುರೋಹಿತರನ್ನು ಒಂದು ವೇಳೆ ತಂದು ವಿಧಿ ವಿಧಾನ ಮಾಡಿದರೆ ನಾನು ಖಂಡಿತಾ ಅವರೆಲ್ಲರನ್ನು `ಕಾಡು’ತ್ತೇನೆ!’ಇದು ಜೀವಂತ, ವರ್ತಮಾನದ ಮನಸ್ಸು. ಅದು ಅವರ ಬರವಣಿಗೆಯಲ್ಲಿ ಜಾಗೃತವಾಗಿದೆ. ಅವರ `ಚಾವಡಿ’ಯ ಬರಹಗಳು, ಅವರ ಆತ್ಮಕಥನಾತ್ಮಕ ಅಂಕಣಗಳು ಪುಸ್ತಕ ರೂಪದಲ್ಲಿ ಬರಬೇಕು. ಈಗ ಮಾರುಕಟ್ಟೆಯಲ್ಲಿ ಇಲ್ಲದ ಅವರ ನಾಲ್ಕೂ ಪುಸ್ತಕಗಳು ಪುನರ್ ಮುದ್ರಣಗೊಳ್ಳಬೇಕು. ಸೆಮಿನಾರು, ಸ್ಕೀಮು, ಅನುದಾನ, ಪ್ರಶಸ್ತಿ, ಫಲಕಗಳ `ಸಾಂಸ್ಥಿಕ’ ರೂಪದಲ್ಲಿ ಸ್ಥಾವರಗೊಂಡು ಶಿಥಿಲವಾಗುತ್ತಿರುವ ಚಿಂತನಶೀಲತೆ, ಇಂಥ ತೀವ್ರ ಮನಸ್ಸುಗಳ ಸಂಪರ್ಕದಿಂದ ಜಂಗಮಗೊಳ್ಳಬೇಕು, ಮುಕ್ತಗೊಳ್ಳಬೇಕು, ಮಾನವೀಯಗೊಳ್ಳಬೇಕು. ಆಗಲೇ, ತಿರುಪತಿ ತಿಮ್ಮಪ್ಪನಿಗೆ 52 ಕೋಟಿ ರೂಪಾಯಿ ಕಿರೀಟ ತೊಡಿಸುವ ಜನನಾಯಕರಿಂದ ನಾಳೆಯ ಲೋಕ ಬಚಾವಾಗಬಲ್ಲದು.

ಎಸ್.ದಿವಾಕರ್ ಅವರ ಕಥಾ ಜಗತ್ತು

ಕನ್ನಡದ ಮೊದಲ ಪಂಕ್ತಿಯ ಅನುವಾದ ಕೃತಿಗಳಲ್ಲೊಂದಾದ ಎಸ್.ದಿವಾಕರ್ ಅವರ 'ಕಥಾ ಜಗತ್ತು' ಹೊಸ ಆವೃತ್ತಿ ಜುಲೈ 19ರ ಭಾನುವಾರ ಬಿಡುಗಡೆಯಾಗಲಿದೆ. ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಬೆಳಗ್ಗೆ 10ಕ್ಕೆ ಕಾರ್ಯಕ್ರಮ. ದಿವಾಕರ್ ಅವರೊಂದಿಗೆ ಪ್ರೊ. ಎಚ್.ಕೆ.ರಾಮಚಂದ್ರಮೂರ್ತಿ, ಜಯಂತ ಕಾಯ್ಕಿಣಿ ಹಾಗೂ ಎಸ್.ಆರ್.ವಿಜಯಶಂಕರ ಕಾರ್ಯಕ್ರಮದಲ್ಲಿ ಭಾಗವಹಿಸುವರು.'ಕಥಾ ಜಗತ್ತು' ನೊಬೆಲ್ ಸಾಹಿತ್ಯ ಪುರಸ್ಕಾರಕ್ಕೆ ಪಾತ್ರರಾದ ಐವತ್ತು ಕಥೆಗಾರರ ಕಥೆಗಳ ಸಂಕಲನ. ಜಗತ್ತಿನ ಅತ್ಯುತ್ತಮ ಕಥೆಗಳನ್ನು ಕನ್ನಡದ ಮೂಲಕ ಕಾಣಿಸುವ ದಿವಾಕರ್ ಅವರ ಕೆಲಸ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆ.ಈ ಕೃತಿಯ ಬಗ್ಗೆ ಕವಿ ಗೋಪಾಲಕೃಷ್ಣ ಅಡಿಗರು ಅಭಿಪ್ರಾಯವೆಂದರೆ "ಎಸ್.ದಿವಾಕರ್ ಈ ಕಥೆಗಳೆಲ್ಲವನ್ನೂ ಅತ್ಯಂತ ಸಮರ್ಪಕ ರೀತಿಯಲ್ಲಿ, ಮೂಲ ಕಥೆಗಳ ಶ್ರೇಷ್ಠತೆಗೆ ಕುಂದು ಬಾರದ ರೀತಿಯಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕಥೆಗಳಲ್ಲಿ ಪಾತ್ರ, ಸನ್ನಿವೇಶಗಳನ್ನು ಒತ್ತಟ್ಟಿಗಿಟ್ಟು ನೋಡಿದಲ್ಲಿ, ಇವು ಕನ್ನಡದ್ದೇ ಕಥೆಗಳೋ ಎಂದೆನ್ನಿಸುವಷ್ಟು ಸಹಜವಾಗಿವೆ. ಇದು ಕನ್ನಡಕ್ಕೆ ಅವರು ಸಲ್ಲಿಸುತ್ತಿರುವ ದೊಡ್ಡ ಸೇವೆ ಎನ್ನುವುದರಲ್ಲಿ ಸಂದೇಹವಿಲ್ಲ" ಎಂದು ಮೆಚ್ಚಿಕೊಂಡಿದ್ದರು."ನನ್ನ ಜೀವನದಲ್ಲಿ ಈ ತನಕ ಸಿಕ್ಕಿರುವ ಎಲ್ಲ ಬಹುಮಾನಗಳಿಗಿಂತಲೂ ಅತ್ಯಂತ ದೊಡ್ಡ ಬಹುಮಾನ ಈ ಕಥಾಜಗತ್ತು. ಇಷ್ಟೊಂದು ಕಥೆಗಳ ಅನುವಾದವನ್ನು ಒಬ್ಬರೇ ಮಾಡುವುದೆಂದರೆ ಎಂಟೆದೆ ಬೇಕು. ಇಲ್ಲಿನ ಕಥೆಗಳು ಕನ್ನಡದವೇ ಎಂದು ಭ್ರಮೆ ಹುಟ್ಟಿಸುವಷ್ಟು ಯಶಸ್ಚಿಯಾಗಿದೆ ಅನುವಾದ" ಎನ್ನುವುದು ಕಾದಂಬರಿಕಾರ ಚದುರಂಗರು ವ್ಯಕ್ತಪಡಿಸಿದ್ದ ಮೆಚ್ಚುಗೆ.ಕಥಾಜಗತ್ತು ಕೃತಿಯ ಪ್ರತಿಗಳು ತೀರಿಹೋಗಿ ಬಹುಕಾಲವಿದ್ದರೂ ಎರಡನೇ ಮುದ್ರಣದ ಭಾಗ್ಯ ಕೂಡಿಬಂದಿರಲಿಲ್ಲ. ಬೆಂಗಳೂರಿನ ಸಾಗರ ಪ್ರಕಾಶನ ಇದೀಗ ಕಥಾಜಗತ್ತನ್ನು ಮರಳಿ ಮುದ್ರಿಸಿದೆ. ಮಳೆಯ ದಿನಗಳು; ಕಥೆಗೆ ಒಡ್ಡಿಕೊಳ್ಳಲು ಲಾಯಕ್ಕಾದ ದಿನಗಳು.

Wednesday, July 1, 2009

ಕಾರಿಂಜದಲ್ಲಿ ದೃಢಕಲಶಾಭಿಶೇಕ

ಕುಂಬಳೆ:
ಇಚ್ಲಂಪಾಡಿ ಕಾರಿಂಜ ಮಹಾದೇವ ಶಾಸ್ತಾರ ಕ್ಷೇತ್ರದಲ್ಲಿ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಜುಲಾಯಿ ಮೂರರಂದು ಶುಕ್ರವಾರ ದೃಢಕಲಶಾಭಿಶೇಕ ಕಾರ್ಯಕ್ರಮ ಜರಗಲಿದೆ. ಆ ದಿನ ಪ್ರಾತಃಕಾಲ ಪೂಜೆ, ಬೆಳಗ್ಗೆ ೯ ಗಂಟೆಯ ನಂತರ ಕಲಶಪೂಜೆ, ದೃಢಕಲಶಾಭಿಷೇಕ, ಮಧ್ಯಾಹ್ನದ ೧೨ಕ್ಕೆ ಮಹಾಪೂಜೆ, ಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ೮ಕ್ಕೆ ವಿಶೇಷ ದೀಪಾಲಂಕೃತ ಕಾರ್ತಿಕಪೂಜೆ, ಪ್ರಸಾದ ವಿತರಣೆ ಜರಗಲಿರುವುದು.ಕುಂಬಳೆ ಸತ್ಯದ ಸೀಮೆ ಇಚ್ಲಂಪಾಡಿ ಧರ್ಮದ ಚಾವಡಿಯ ಆರಾಧ್ಯ ದೇವರುಗಳಾದ ಶ್ರೀ ಮಹಾದೇವ ಶಾಸ್ತಾರರ ಕ್ಶೇತ್ರ ಕಾರಿಂಜದಲ್ಲಿ ಪ್ರಕೃತಿ ರಮಣೀಯ ಸ್ಥಳದಲ್ಲಿದೆ. ವಿವಿಧ ತಾಂತ್ರಿಕ, ವೈದಿಕ, ಧಾರ್ಮಿಕ ಹಾಗೂ ಸಾಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮೇ ತಿಂಗಳ ೧೨ರಿಂದ ೨೦ರ ತನಕ ಬಹಳ ವಿಜೃಂಭಣೆಯಾಗಿ ಪುನಃಪ್ರತಿಷ್ಟಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮಗಳು ಜರಗಿದ್ದವು. ಪ್ರತಿಷ್ಟೆಯಾಗಿ ನಲವತ್ತೆಂಟನೇ ದಿನ ಈ ದೃಢಕಲಶ ನಡೆಯಲಿಕ್ಕಿದೆ. ಕಾರಿಂಜ ಯಕ್ಷಗಾನ ಮೇಳ ಶತಮಾನದ ಹಿಂದೆ ಕುಂಬಳೆ ಸೀಮೆಯಲ್ಲಿ ಪ್ರಸಿದ್ಧವಾಗಿತ್ತು. ಕಾರಿಂಜ ದೇವಳದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಕೂಡಾ ಕೆಲವು ವರ್ಷಗಳು ನಡೆದಿತ್ತು ಹಾಗೂ ಕ್ಷೇತ್ರವು ಇಲ್ಲಿನ ಜನಜೀವನದ ಅಭಿವೃದ್ಧಿಯ ಸೋಪಾನ ಹಾಕಿತ್ತು. ಕೃಷಿ ಪ್ರಧಾನವಾದ ಈ ಕ್ಷೇತ್ರ ನಾಯ್ಕಾಪಿನಿಂದ ಐ.ಸಿ. ರೋಡಿನ ಮುಖಾಂತರ ಮೂರು ಕಿ.ಮೀ. ದೂರದಲ್ಲಿದೆ.ಮಧ್ಯಾಹ್ನದ ಕಾರ್ಯಕ್ರಮಗಳ ನಂತರ ಅಪರಾಹ್ನ ಮೂರರಿಂದ ಬ್ರಹ್ಮಕಲಶ ಸಮಿತಿ, ಉಪಸಮಿತಿಗಳ ವಿಶೇಷ ಸಭೆ ನಡೆಯಲಿದ್ದು ಕಾರ್ಯಕರ್ತರೆಲ್ಲರೂ ಸಭೆಯಲ್ಲಿ ಭಾಗವಹಿಸಬೇಕೆಂದು ಬ್ರಹ್ಮ ಕಲಶಾಭಿಷೇಕ ಸಮಿತಿಯ ಅಧ್ಯಕ್ಷ ಅಡ್ವಕೇಟ್ ಬಿ. ಸುಬ್ಬಯ್ಯ ರೈ ವಿನಂತಿ ಮಾಡಿಕೊಂಡಿರುತ್ತಾರೆ. ಭಗವದ್ಭಕ್ತರೆಲ್ಲರೂ ಧೃಢಕಲಶದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಶ್ರೀದೇವರ ಪ್ರಸಾದ ಸ್ವೀಕರಿಸಬೇಕಾಗಿ ಅಧಿಕೃತರು ಅಪೇಕ್ಷಿಸಿರುತ್ತಾರೆ.

Tuesday, June 30, 2009

ಈ ಪತ್ರಿಕೆಯ ಜನ್ಮದಿನ

ಕಾಸರಗೋಡು: ಜುಲೈ 1 ಕನ್ನಡ ಪತ್ರಿಕಾ ದಿನಾಚರಣೆ. ಮಂಗಳೂರಿನಲ್ಲಿ 1843 ಜುಲೈ 1ರಂದು 'ಮಂಗಳೂರು ಸಮಾಚಾರ' ಜನ್ಮತಾಳಿತು. ಇದರ ನೆನಪಿಗೆ ಕನ್ನಡ ಪತ್ರಿಕಾ ದಿನಾಚರಣೆ ಆಚರಿಸಲಾಗುತ್ತಿದೆ. ಇದೇ ದಿನ ನಮ್ಮ www.kasaragodvartha.com ಎಂಬ ಈ ಪತ್ರಿಕೆ' ನಿಮ್ಮ ಕಣ್ಣ ಮುಂದಿದೆ. ಹಾಗೆ ನೋಡಿದರೆ ಇದು ಅಕ್ಷರಶಃ ಕರಾವಳಿಯ ಹೆಮ್ಮೆ. 'ಮಂಗಳೂರು ಸಮಾಚಾರ' ಪತ್ರಿಕೆಯನ್ನು ಜರ್ಮನಿಯ ಬಾಸೆಲ್ ಮಿಷನ್ನ ರೆವರೆಂಡ್ ಹೆರ್ಮನ್ ಮೊಗ್ಲಿಂಗ್ ಎಂಬವರು ಸ್ಥಾಪಿಸಿದರು. ಅಲ್ಲಿಂದ ಇವತ್ತಿನ ವರೆಗೆ ಪತ್ರಿಕಾ ಲೋಕದ ವಿಕಾಸ, ವಿನ್ಯಾಸ ಕುತೂಹಲಕರ. ಕಾಸರಗೋಡಿನಂಥ ಗಡಿನಾಡು ಕೂಡಾ ಪತ್ರಿಕೋದ್ಯಮದಲ್ಲಿ ಯಾವತ್ತೂ ಹಿಂದೆ ಬಿದ್ದಿಲ್ಲ. ಒಂದು ಕಾಲದಲ್ಲಿ ಅಚ್ಚಗನ್ನಡದ ನಾಡು ಎಂದೇ ಜನನಿತವಾಗಿದ್ದ ಈ ನೆಲ ಜಾಗತೀಕರಣದ ಭರಾಟೆಯಲ್ಲಿ ಬಹುಭಾಷಾ ಸಂಗಮ ಭೂಮಿಯಾಗಿದೆ. ವೈವಿಧ್ಯ ಸಂಸ್ಕೃತಿ, ಕಲೆ, ಆಚಾರ-ವಿಚಾರ, ಧರ್ಮ-ದೇವರುಗಳ ಬೀಡು ಆಗಿರುವ ಕಾಸರಗೋಡು ವೇಗೋತ್ಕರ್ಷದಲ್ಲಿದೆ.ಮಾಧ್ಯಮ ಕ್ಷೇತ್ರದಲ್ಲಿ ಈ ನೆಲ ತನ್ನ ನೆಲೆಯಲ್ಲಿ ಉಳಿಸಿಕೊಂಡಿದೆ. ಇಲ್ಲಿ ಹತ್ತಾರು ಸಂಜೆ ದೈನಿಕಗಳು ಹುಟ್ಟಿಂದಂತೆ ಬೆಳಗ್ಗಿನ ಪತ್ರಿಕೆ ಯಶಸ್ವಿಯಾಗಿ ಬೇರೂರಿಲ್ಲ.ಆದರೆ ಮುದ್ರಣ ಮಧ್ಯಮಕ್ಕಿಂತ ಭಿನ್ನವಾದ ಸದಾ ನಿರಂತರ ಸುದ್ದಿ ಒದಗಿಸುವ ಆನ್ಲೈನ್ ಪತ್ರಿಕೋದ್ಯಮ ಇಲ್ಲಿ ಬೇರೂರುತ್ತಿದೆ. ಬೇರೂರಿದ ವೇಗದಷ್ಟೇ ಆನ್ಲೈನ್ ಪತ್ರಿಕೆಗಳು ಮುರುಟಿಹೋಗುತ್ತುರುವ ಅಥವಾ ನಿಷ್ಕ್ರಿಯವಾಗಿರುವ ಹಲವಾರು ನಿದರ್ಶನಗಳು ಗಡಿನಾಡಿನಲ್ಲಿ ನಡೆದಿದೆ. ನಡೆಯುತ್ತಿದೆ. ಇವುಗಳಿಗಿಂತ ಭಿನ್ನವಾಗಿ ಕಾಸರಗೋಡಿನಿಂದ ಇತ್ತೀಚೆಗೆ www.kasaragodvartha.com ಎಂಬ ಮಲೆಯಾಳ ವೆಬ್ ಅಥವಾ ಆನ್ ಲೈನ್ ಪತ್ರಿಕೆ ಉಸಿರಾಡುತ್ತಿದೆ. ಇಂಗ್ಲಿಷ್ನಲ್ಲಿಯೂ ಸುದ್ದಿ ಪ್ರಕಟಿಸುತ್ತಿದೆ. ಇದು ಕಾಸರಗೋಡಿನ ಸ್ಥಳೀಯ ಸುದ್ದಿಗಳೊಂದಿಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸುದ್ದಿಗಳನ್ನು ಅಪ್ಲೋಡ್ ಮಾಡುತ್ತಿದೆ. ಸುದ್ದಿಗೆ ಮತ್ರ ಸೀಮಿತವಾಗದೆ ವೈವಿಧ್ಯ ವಿಷಯಗಳನ್ನೂ ಒಳಗೊಂಡು www.kasaragodvartha.com ದೇಶ ವಿದೇಶಗಳಲ್ಲಿ ಗಮನ ಸೆಳೆಯುತ್ತಿದೆ. ಇದೀಗ ಅಂದರೆ ಜುಲೈ 1ರಂದು ಕನ್ನಡ ಆವೃತ್ತಿಯನ್ನೂ ಆರಂಭಿಸಲಾಗುತ್ತಿದೆ. ಇದರಿಂದ ಗಡಿನಾಡ ಸುದ್ದಿಗಳು ನೆರೆಯ ಕರ್ನಾಟಕ ಸಹಿತ ದೇಶ-ವಿದೇಶದ ಕನ್ನಡಿಗರಿಗೆ ಬೆರಳ ತುದಿಯಲ್ಲಿ ಕನ್ನಡದಲ್ಲಿ ತಾಜಾ ಸುದ್ದಿಗಳನ್ನು ನಿರೀಕ್ಷಿಸಬಹುದು. ಇದಕ್ಕೆ ಕನ್ನಡಿಗರಾದ ನಿಮ್ಮೆಲ್ಲರ ಸಹಾಯ-ಸಹಕಾರವನ್ನು ಆತ್ಮೀಯತೆಯಿಂದ ಬಯಸುತ್ತೇವೆ. ನಿಮಗೆ ಸ್ವಾಗತ.

ಸುರೇಶ್ ಕೆ. ಎಡನಾಡು.

ಹೊಳೆ ಎಂಬ ಜೀವನದಿಯ ನರಕ

ಕಾಸರಗೋಡು:ಮಂಗಳೂರಿನಿಂದ ತಿರುವನಂತಪುರಕ್ಕೆ ರೈಲಿನಲ್ಲಿ ಸಂಚರಿಸುವ ಯಾತ್ರಿಕ ನಿದ್ದೆ ಮಾಡಿದ್ದರೂ ಕೊಚ್ಚಿಗೆ ತಲುಪಿದಾಗ ಮೂಗು ಮುಚ್ಚಿಕೊಳ್ಳುತ್ತಾ ಎಚ್ಚರವಾದಂತೆ ಕಾಸರಗೋಡಿನ ತಾಲೂಕಿನ ಉಪ್ಪಳ ಸೇತುವೆ ಮೇಲೆ ವಾಹನದಲ್ಲಿ ಸಂಚರಿಸುವ ಪ್ರಯಾಣಿಕರೂ ಮೂಗು ಮುಚ್ಚಿಕೊಳ್ಳುತ್ತಾರೆ. ಈ ಉಪ್ಪಳ ಹೊಳೆಯ ಪರಿಚಯ ಇಲ್ಲದವರೂ ಯಾರೂ ಇಲ್ಲ. ಅದರ ವಾಸನೆಯೇ ಅದಕ್ಕೆ ಕಾರಣ. ಹೊಳೆಯನ್ನು ಕಂಡು ಕಣ್ಣೀರು ಸುರಿಸುವವರೇ ಇಲ್ಲ. ಜಿಲ್ಲೆಯ ಎಲ್ಲಾ ನದಿಗಳಿಗೂ ಇದೇ ಪಾಡಾದರೂ ಉಪ್ಪಳದ ನದಿಯ ಕತೆಯೇ ಬೇರೆ. ಅದರ ಸಮೀಪಕ್ಕೆ ಬಂದಂತೆ ಅಸಹ್ಯ ವಾಕರಿಕೆ ಬರುತ್ತದೆ! ಕೇವಲ ಹತ್ತು ವರ್ಷಗಳ ಹಿಂದೆ ನದಿ-ಹೊಳೆಗಳ ಬಗ್ಗೆ ನಮಗಿದ್ದ ಆಕರ್ಷಣೆ, ಅರಿವು ಎಲ್ಲಾ ತಲೆಕೆಳಗಾಗಿದೆ. ಕನ್ನಡಿಯಂಥ ನದಿಯ ನೀರು ನಮ್ಮ ಊಹೆಗೂ ನಿಲುಕದಂತೆ ಕಲುಷಿತಗೊಂಡಿದೆ. ಅಂದು ನೀರಿಗಿಳಿದು ಈಜಾಡುವ ಮಂದಿ ಇಂದು ಹೊಳೆಯ ನೀರಿನಲ್ಲಿ ಕಾಲಿಡಲು ಹೇಸುತ್ತಿದ್ದಾರೆ. ಆಗಿರುವುದೇನು? :ಉಪ್ಪಳ ಮತ್ತು ಹೊಸಂಗಡಿ ರಾಷ್ಟ್ರೀಯ ಹೆದ್ದಾರಿಯ ಮಧ್ಯೆ ಉಪ್ಪಳ ಹೊಳೆ ಸಿಗುತ್ತದೆ. ಬಸ್ಸು ಮತ್ತಿತರ(ಹವಾನಿಯಂತ್ರಣ ಇಲ್ಲದ) ವಾಹನಗಳಲ್ಲಿ ಪ್ರಯಾಣಿಸುತ್ತಿದ್ದರೆ ಹೊಳೆ ಬಂದಾಗ ಎಂಥವನೂ ಮೂಗು ಮುರಿಯುವ ಸನ್ನಿವೇಶ ನಿಮರ್ಾಣವಾಗಿದೆ. ಸಂಜೆಯಾದರೆ ಸಾಕು; 7 ಗಂಟೆಯಿಂದ ರಾತ್ರಿ 9 ಗಂಟೆಯ ವರೆಗೆ ಉಪ್ಪಳ ಸೇತುವೆಯ ಕೆಳಗಿನ ನೀರಿಗೆ ಧೊಪ್ಪೆಂದು ಪ್ಲಾಸ್ಟಿಕ್ ಗೋಣಿ ಚೀಲಗಳು ಬೀಳುತ್ತದೆ. ಹೊಸಂಗಡಿ, ಉಪ್ಪಳ, ಕೈಕಂಬ ಮೊದಲಾದ ಪೇಟೆಗಳ ಕಸಾಯಿಖಾನೆಯಿಂದ ಮಾಂಸದ ತ್ಯಾಜ್ಯಗಳನ್ನು ಗೋಣಿ ಚೀಲಗಳಲ್ಲಿ ಕಟ್ಟಿ ಆಟೋರಿಕ್ಷಾಗಳಲ್ಲಿ ಕದ್ದು ಮುಚ್ಚಿ ನಿರ್ದಯವಾಗಿ ನದಿಗೆ ಎಸೆಯುವುದು ರೂಢಿಯಾಗಿದೆ. ಕೋಳಿ, ಆಡು, ಕುರಿ ಮತ್ತು ಕೋಣ-ದನಗಳ ಮಾಂಸ ಮಾರಾಟ ಮಾಡಿ ಉಳಿದ ತ್ಯಾಜ್ಯಗಳನ್ನು ಹೀಗೆ ನದಿಗೆ ಸುರಿಯಲಾಗುತ್ತದೆ. ಕೋಳಿಯ ಗರಿಯನ್ನೊಳಗೊಂಡಂತೆ ಆಡು-ಕೋಣ ಮೊದಲಾದವುಗಳ ಚರ್ಮ, ಕರುಳು, ಎಲುಬು ಇತ್ಯಾದಿಗಳನ್ನು ನಿತ್ಯವೂ ನದಿಗೆ ಸುರಿಯುತ್ತಲೇ ಇದ್ದಾರೆ. ಅವೆಲ್ಲ ಗೋಣಿಯೊಳಗೆ ಕೊಳೆತು ಹೋಗುತ್ತದೆ. ಇವುಗಳಿಗೆ ಸದಾ ಹೊಂಚುಹಾಕುವ ನೂರಿನ್ನೂರು ಗಿಡುಗಗಳು ಇವೆ. ಇದರ ಇಮ್ಮಡಿಯಷ್ಟು ಕಾಗೆಗಳೂ ನದಿಯ ಆಸುಪಾಸಿನಲ್ಲಿ ಸುತ್ತಾಡುತ್ತಲೇ ಇರುತ್ತವೆ. ಕೊಳೆತ ಕರುಳು, ಎಲುಬು ಮತ್ತು ಚರ್ಮಗಳನ್ನು ತಮ್ಮ ಕೊಕ್ಕುಗಳಲ್ಲಿ ಎತ್ತಿಕೊಂಡು ಸುಖವಾಗಿ ಹಾರಾಡುವ ಈ ಪಕ್ಷಿಗಳ ಬಾಯಿಂದ ಜಾರಿ ಸಮೀಪದ ಬಾವಿಗಳಿಗೆ ಬೀಳುತ್ತದೆ. ಕೆಲವು ವರ್ಷಗಳಲ್ಲಿ ಈ ವಠಾರದ ಗದ್ದೆ ಮತ್ತು ತೆಂಗಿನ ತೋಟಗಳಂತೂ ಕೋಳಿಯ ಗರಿಗಳಿಂದ ಬಿಳಿ ಬಣ್ಣಕ್ಕೆ ತಿರುಗುವುದುಂಟು. ವಿದ್ಯುತ್ ಕಂಬ, ತೆಂಗಿನ ಕುಬೆ, ಮರ, ಮಾಡುಗಳಲ್ಲಿ ಎಲುಬು-ಕರುಳುಗಳು ಬಿದ್ದು, ಅಲ್ಲಿಯೇ ಕೊಳೆತು, ಒಣಗಿ ವಾಸನೆ ಹೊಡೆಯುತ್ತದೆ.ಸಮುದ್ರದ ಉಬ್ಬರದಿಂದ ನದಿಗೆ ಉಪ್ಪು ನೀರು ಹರಿಯುವುದನ್ನು ತಡೆಯಲು ಸಮೀಪದಲ್ಲಿ ಕಿಂಡಿ ಅಣೆಕಟ್ಟೊಂದನ್ನು ಕಟ್ಟಲಾಗಿದೆ. ಈ ಅಣೆಕಟ್ಟೆಯ ಬುಡದಲ್ಲಿ ಕೊಳೆತ ಮಾಂಸ ಮತ್ತು ರಕ್ತ ಹೆಪ್ಪುಗಟ್ಟಿ ನೋಡುಗರನ್ನು ನಿತ್ರಾಣಗೊಳಿಸುತ್ತದೆ. ಭದ್ರವಾಗಿ ಕಟ್ಟಿದ ಗೋಣಿ ಚೀಲಗಳ ಒಳಗೆ ಮಾಂಸದ ತ್ಯಾಜ್ಯಗಳು ಕೊಳೆತು ಹಪ್ಪಳವಾಗಿದೆ. ಅಣೆಕಟ್ಟಿನ ಉದ್ದಕ್ಕೂ ಇಂಥ ನೂರಾರು ಗೋಣಿಗಳು ಬಿಸಿಲಿಗೆ ಒಣಗಿ ಅಂಟಿ ಕೂತಿದೆ. ಇವುಗಳ ದುವರ್ಾಸನೆಗೆ ರಾತ್ರಿಕಾಲದಲ್ಲಿ ನರಿಗಳು ಮುಗಿ ಬೀಳುತ್ತಿವೆ. ಹೆಬ್ಬಾವುಗಳೂ ಠಿಕಾಣಿ ಹೂಡುತ್ತಿವೆ. ಊರಿನ ಸುಮಾರು 15ಕ್ಕೂ ಮಿಕ್ಕಿದ ನಾಯಿಗಳು ಕೊಳೆತ ಮಾಂಸದ ರುಚಿ ಹಿಡಿದು ಮನೆಯನ್ನು ಮರೆತು ಹೊಳೆಯಲ್ಲಿ ಗುಂಪಾಗಿ ಜೀವನ ಸಾಗಿಸುತ್ತಿವೆ. ಮಧ್ಯಾಹ್ನದ ಹೊತ್ತಿಗೆ ಸಂಚಾರ ಹೊರಡುವ ಈ ನಾಯಿಗಳು ಬಿಸಿಲಿನ ಕಾವು ಕಡಿಮೆಯಾದಾಗ ಹೊಳೆಯಲ್ಲಿ ಸಂಘಜೀವನ ನಡೆಸುತ್ತಿದ್ದು, ಒಬ್ಬಂಟಿಯಾಗಿ ಹೊಳೆಯಲ್ಲಿ ಬರುವ ಮನುಷ್ಯ, ಕರುಗಳ ಮೇಲೆ ಎಗರಿ ಬೀಳುತ್ತಿವೆ. ಸಮೀಪದ ಮನೆಯವರು ಸಾಕುವ ಕೋಳಿಗಳ ಮೇಲೆ ಆಕ್ರಮಣ ಮಾಡುವ ಈ ನಾಯಿಗಳು ಅತ್ಯಂತ ಅಪಾಯಕಾರಿಯಾಗಿ ಬೆಳೆಯುತ್ತಿದೆ.1 ಕಿ.ಮೀ. ದೂರಕ್ಕೂ ಕೊಳೆತು ನಾರುತ್ತಿರುವ ಈ ಹೊಳೆಯಲ್ಲಿ ತೆಪ್ಪದಲ್ಲಿ ಮೀನು ಹಿಡಿಯುವ ಮಂದಿ ಇದ್ದಾರೆ. ಈ ಹೊಳೆಯ ಮೀನನ್ನು ತಿನ್ನುವವರಿಗೆ ಯಾವ ಕೊರತೆಯೂ ಇಲ್ಲ! ಇದೇ ತ್ಯಾಜ್ಯಗಳು ಸಮುದ್ರ ಸೇರಿ ಅಲ್ಲಿನ ಮೀನುಗಳನ್ನು ತಿನ್ನುವವರೂ ಈ ಹೊಳೆಗೊಮ್ಮೆ ಇಳಿದು ನೋಡಬೇಕು.ಹೊಳೆಯ ತೀರದಲ್ಲಿ ಗದ್ದೆ-ತೆಂಗುತೋಟಗಳು ಇದ್ದು, ದುವರ್ಾಸನೆಗೆ ಇಲ್ಲಿ ಕೆಲಸ ಮಾಡಲಾಗುತ್ತಿಲ್ಲ. ಊರಲ್ಲಿ ಸಾಕುವ ಕೋಳಿಗಳು ವಿಚಿತ್ರ ರೋಗಗಳಿಗೆ ಬಲಿಯಾಗುತ್ತವೆ. ಆದರೆ ಜನರ ಕ್ಷೇಮದ ಬಗ್ಗೆ ಜನಪ್ರತಿನಿಧಿಗಳಿಗೆ ಯಾವುದೇ ಕಾಳಜಿ ಕಂಡುಬರುತ್ತಿಲ್ಲ ಎಂದು ನಾಗರಿಕರು ನೊಂದು ಹೇಳುತ್ತಾರೆ.ಕಸಾಯಿಖಾನೆಯ ತ್ಯಾಜ್ಯಗಳನ್ನು ತಂದು ನದಿಗೆ ಎಸೆಯುವ ಮಾಂಸದ ವ್ಯಾಪಾರಿಗಳ ವಿರುದ್ಧ ಊರವರು ಪ್ರತಿಭಟಿಸಿದ್ದೂ ಉಂಟು. ಈ ಪ್ರತಿಭಟನೆಗೆ ಗೂಂಡಾಗಿರಿಯ ಪ್ರತಿಕ್ರಿಯೆ ನಾಗರಿಕರಿಗೆ ಸಿಕ್ಕಿದೆ. ಇದು ಶಾಸಕರು, ಜಿಲ್ಲಾಧಿಕಾರಿ, ಆರೋಗ್ಯಾಧಿಕಾರಿಗಳಿಗೆ ದೂರು ನೀಡಿದ ಪರಿಣಾಮ ಎನ್ನುತ್ತಾರೆ ಸ್ಥಳೀಯರು.ಇದುವರೆಗೂ ಅಧಿಕಾರಿಗಳು ಮತ್ತು ರಾಜಕಾರಣಿಗಳ ಪಂಚೇಂದ್ರಿಯಗಳು ದುರ್ಬಲವಾಗಿರುವುದರಿಂದ ನದಿ ಮತ್ತು ಜನರ ಕೂಗು ತಟ್ಟುತ್ತಿಲ್ಲ. ಪರಿಸರವಾದಿಗಳು ಸೇತುವೆಯ ಮೇಲೆ ಪ್ರಯಾಣಿಸಿದ ಲಕ್ಷಣಗಳು ಕಂಡುಬಂದಿಲ್ಲ! ನಾಡಿನ ಜೀವ ನದಿಗಳು ಶ್ಮಶಾನಕ್ಕಿಂತಲೂ ಭೀಬತ್ಸವಾದರೆ ಇದಕ್ಕೆ ಯಾರು ಹೊಣೆ? ಪರಿಹಾರ ಕಾಣದ ಈ ಸಮಸ್ಯೆಗೆ ಉಪ್ಪಳ ಹೊಳೆಯ ಎರಡೂ ತೀರದ ಜನರು ಬೇಸತ್ತು ಹೋಗಿದ್ದಾರೆ. ಈ ಜನರ ಸ್ವಂತ ಮಣ್ಣಿನಲ್ಲಿ ಸ್ವಚ್ಛ ಗಾಳಿ ಮತ್ತು ನೀರು ಸೇವಿಸುವ ಹಕ್ಕನ್ನು ಕಸಿದುಕೊಂಡವರ ವಿರುದ್ಧ ಕ್ರಮ ಕೈಗೊಳ್ಳುವುದು ಮತ್ತು ಕಸಾಯಿಖಾನೆಗಳಿಗೆ ಅನುಮತಿ ನೀಡಿ ಇಂಥ ಸಾಮಾಜಿಕ-ಆರೋಗ್ಯ ಸಮಸ್ಯೆ ಕುರಿತು ಕಣ್ಣಿದ್ದೂ ಕುರುಡರಂತೆ ವತರ್ಿಸುವ ಪಂಚಾಯತು ಅಧಿಕಾರಿಗಳಿಗೆ ಜನರಿಗೆ ನೆಮ್ಮದಿಯ ಬದುಕು ಕಲ್ಪಿಸುವ ಜವಾಬ್ದಾರಿಯಿಲ್ಲವೇ? ಇಂದು ವಿಶ್ವ ಪರಿಸರ ದಿನಾಚರಣೆ. ಅತ್ಯಧಿಕ ನದಿಗಳಿರುವ ಕಾಸರಗೋಡು ಜಿಲ್ಲೆಯ ಎಲ್ಲಾ ನದಿಗಳಿಗೂ ಇದೇ ಪಾಡು. ನದಿಯಲ್ಲಿ ಶುದ್ಧ ನೀರು ಹರಿಯಲು ಬಿಡದವರ ವಿರುದ್ಧ ಸಾರ್ವತ್ರಿಕ ಆಂದೋಲನ ಆಗಬೇಕು.
ಸುರೇಶ್ ಕೆ. ಎಡನಾಡು.

Tuesday, May 12, 2009

ಹೈ.ಚಿತ್ರ ಚೆನ್ನಾಗಿದೆ.

ಸುರೇಶ ಎಡನಾಡು.